ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾರಿ ಶಾಕ್ ನೀಡಿದ್ದಾರೆ.
ಯೋಜನೆಗಳಲ್ಲಿ ನಡೆಯುತ್ತಿರುವ ಭಾರಿ ಪ್ರಮಾಣದ ದುರುಪಯೋಗ ಹಾಗೂ ತಾಂತ್ರಿಕ ಲೋಪಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಸರ್ಕಾರ, ಹಾಲಿ ಸೌಲಭ್ಯ ಪಡೆಯುತ್ತಿರುವವರು ಸೇರಿದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಎಸ್ಪಿಗಳು (SP) ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (DFO) ಜೊತೆ ನಡೆಸಿದ ಸುದೀರ್ಘ ಸಭೆಯ ಬಳಿಕ ಸಿಎಂ ಈ ಮಹತ್ತರ ಘೋಷಣೆ ಮಾಡಿದ್ದಾರೆ.
ಮರು-ಅರ್ಜಿ ಸಲ್ಲಿಕೆಗೆ ಅಸಲಿ ಕಾರಣಗಳೇನು?:
ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಯೋಜನೆಗಳಲ್ಲಿ ನಡೆಯುತ್ತಿರುವ ಆಘಾತಕಾರಿ ಅಕ್ರಮಗಳನ್ನು ಬಿಚ್ಚಿಟ್ಟರು:
- ಮೃತಪಟ್ಟವರ ಹೆಸರಿನಲ್ಲಿ ₹100 ಕೋಟಿ ದುರುಪಯೋಗ: ಗೃಹಲಕ್ಷ್ಮಿ ಯೋಜನೆಯ ಕೆಲವು ನೈಜ ಫಲಾನುಭವಿಗಳು ನಿಧನರಾಗಿದ್ದರೂ, ಅವರ ಹೆಸರಿನಲ್ಲಿ ಬೇರೆಯವರು ಬ್ಯಾಂಕ್ ಖಾತೆಗಳ ಮೂಲಕ ಹಣ ಪಡೆಯುತ್ತಿದ್ದಾರೆ. ಈ ರೀತಿ ನೈಜ ಫಲಾನುಭವಿಗಳಲ್ಲದವರ ಪಾಲಿಗೆ ಬರೋಬ್ಬರಿ ₹100 ಕೋಟಿಗೂ ಹೆಚ್ಚು ಹಣ ದುರುಪಯೋಗವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
- ಒಂದೇ ಮನೆಯಲ್ಲಿ 2-3 ಯಜಮಾನಿಯರು!: ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಒಂದೇ ಮನೆಯಲ್ಲಿ ಇಬ್ಬರು-ಮೂವರು ತಾವು ‘ಮನೆಯ ಯಜಮಾನಿ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಒಂದು ಮನೆಗೆ ಒಬ್ಬರು ಮಾತ್ರ ಯಜಮಾನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹೀಗಾಗಿ ನಿಜವಾದ ಯಜಮಾನಿ ಯಾರು ಎಂಬುದನ್ನು ಪರಿಶೀಲಿಸಲು ಹೊಸ ಅರ್ಜಿ ಕಡ್ಡಾಯ ಮಾಡಲಾಗಿದೆ.
- ಗೃಹಜ್ಯೋತಿಯಲ್ಲಿ 5-6 ಮೀಟರ್ ಅಕ್ರಮ: ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುವವರ ಪೈಕಿ, ಒಬ್ಬರ ಹೆಸರಿನಲ್ಲೇ ಐದಾರು ಮೀಟರ್ಗಳಿರುವುದು ಪತ್ತೆಯಾಗಿದೆ. ಜೊತೆಗೆ, ಯೋಜನೆ ಲಾಭ ಪಡೆಯುವ ಮನೆಯಲ್ಲಿ ಫಲಾನುಭವಿಗಳೇ ವಾಸವಿದ್ದಾರೆಯೇ? ಅಥವಾ ಹೊರರಾಜ್ಯದವರಿಗೆ ಸೌಲಭ್ಯ ಸಿಗುತ್ತಿದೆಯೇ? ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸಿಎಂ ತಿಳಿಸಿದ್ದಾರೆ.
ಯಾರ ಸೌಲಭ್ಯವೂ ರದ್ದಾಗುವುದಿಲ್ಲ, ಆದರೆ ಗುರುತಿನ ಚೀಟಿ ಕಡ್ಡಾಯ:
“ಯಾರನ್ನೂ ಯೋಜನೆಯಿಂದ ತೆಗೆದುಹಾಕುವ ಉದ್ದೇಶ ಸರ್ಕಾರಕ್ಕಿಲ್ಲ ಹಾಗೂ ಸೌಲಭ್ಯವನ್ನು ನಿಲ್ಲಿಸುವುದಿಲ್ಲ. ಆದರೆ, ಸರಿಯಾದ ಮಾಹಿತಿ ನೀಡುವ ‘ಅರ್ಹ ಫಲಾನುಭವಿಗಳಿಗೆ’ ಮಾತ್ರ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಎಲ್ಲರೂ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಕೆಲವೇ ದಿನಗಳಲ್ಲಿ ಹೊಸ ಅರ್ಜಿ ಆಹ್ವಾನಿಸಲಾಗುವುದು ಹಾಗೂ ಫಲಾನುಭವಿಗಳಿಗೆ ವಿಶೇಷ ‘ಗುರುತಿನ ಚೀಟಿ’ ನೀಡಲಾಗುವುದು” ಎಂದು ಸಿಎಂ ವಿವರಿಸಿದ್ದಾರೆ.
ಇದೇ ವೇಳೆ, ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಯ ಸೌಲಭ್ಯವೂ ಅರ್ಹರಿಗಷ್ಟೇ ತಲುಪಬೇಕು ಎಂಬ ಕಾರಣಕ್ಕೆ ‘ಸ್ಮಾರ್ಟ್ ಕಾರ್ಡ್’ ನೀಡಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಇತ್ತೀಚೆಗಷ್ಟೇ ಘೋಷಿಸಿದ್ದನ್ನು ಸ್ಮರಿಸಬಹುದು.
ಲಂಚ ಮುಕ್ತ ರಾಜ್ಯಕ್ಕೆ ಸಿಎಂ ಪಣ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ:
ಗ್ಯಾರಂಟಿ ಯೋಜನೆಗಳ ಜೊತೆಗೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ಮುಖ್ಯಮಂತ್ರಿಗಳು, ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ರೂಪಿಸಲು ಪಣತೊಟ್ಟಿದ್ದಾರೆ.
- ಎಲ್ಲಾ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಕಚೇರಿಗಳಲ್ಲಿ ಲಂಚ ಕೇಳುವವರ ವಿರುದ್ಧ ದೂರು ನೀಡಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆಗಳಿರುವ ‘ದೊಡ್ಡ ಫಲಕ’ ಅಳವಡಿಸಲು ಸೂಚಿಸಲಾಗಿದೆ.
- “ಯಾವುದೇ ಕೆಲಸಕ್ಕೂ ಯಾರೂ ಹತ್ತು ರೂಪಾಯಿಯನ್ನೂ ಲಂಚವಾಗಿ ನೀಡಬಾರದು. ಯಾರಾದರೂ ಲಂಚ ಕೇಳಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶೂನ್ಯ ಪರ್ಸೆಂಟೇಜ್ (Zero Percentage) ಸರ್ಕಾರ ಎನ್ನುವುದನ್ನು ನಾವು ಸಾಬೀತು ಮಾಡುತ್ತೇವೆ” ಎಂದು ಸಿಎಂ ಗುಡುಗಿದ್ದಾರೆ.
- ನಿಯಮ ಬಿಟ್ಟು ಕೆಲಸ ಮಾಡುವಂತೆ ಯಾರೇ ಒತ್ತಡ ಹಾಕಿದರೂ ಅಧಿಕಾರಿಗಳು ಮಣಿಯಬಾರದು. ಆದರೆ, ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಅಥವಾ ಸುಳ್ಳು ದೂರು ದಾಖಲಿಸುವವರ ವಿರುದ್ಧವೂ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕೇಳಗಿನ ಸುದ್ದಿಗಳನ್ನು ಓದಿ:
ಏರ್ಟೆಲ್ ವಿದ್ಯಾರ್ಥಿವೇತನ 2026: ಉಚಿತ ಲ್ಯಾಪ್ಟಾಪ್, 100% ಶುಲ್ಕ ವಿನಾಯಿತಿ
ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್ಲೈನ್ ಅರ್ಜಿ ಆಹ್ವಾನ