ದೇಶದ ಕೋಟ್ಯಂತರ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM Kisan) ಯೋಜನೆಯ 23ನೇ ಕಂತಿನ ಹಣ ಕೊನೆಗೂ ಬಿಡುಗಡೆಯಾಗಿದೆ. ಶನಿವಾರ (ಜೂನ್ 20) ಕೇಂದ್ರ ಸರ್ಕಾರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲಾ 2,000 ರೂಪಾಯಿಗಳನ್ನು ಜಮಾ ಮಾಡಿದೆ.
18,880 ಕೋಟಿ ರೂ. ಆರ್ಥಿಕ ನೆರವು ಬಿಡುಗಡೆ:
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2026-27ನೇ ಹಣಕಾಸು ವರ್ಷದ ಈ ಮೊದಲ ಕಂತನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಇದರಿಂದ ದೇಶಾದ್ಯಂತ ಇರುವ ಸುಮಾರು 9.44 ಕೋಟಿ ರೈತ ಕುಟುಂಬಗಳ ಖಾತೆಗೆ ಒಟ್ಟು 18,880 ಕೋಟಿ ರೂಪಾಯಿಗಳು ಯಶಸ್ವಿಯಾಗಿ ವರ್ಗಾವಣೆಯಾಗಿವೆ.
ಕೆವೈಸಿ ಪೂರ್ಣಗೊಳಿಸಿದವರಿಗೆ ಮಾತ್ರ ಹಣ:
ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಯಂತೆ, ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ, ಆಧಾರ್-ಬ್ಯಾಂಕ್ ಖಾತೆ ಜೋಡಣೆಯಾಗಿರುವ (Aadhaar Seeding) ಹಾಗೂ ಭೂ ದಾಖಲೆಗಳನ್ನು (Land Seeding) ಸರಿಯಾಗಿ ಅಪ್ಡೇಟ್ ಮಾಡಿರುವ ನೈಜ ರೈತರಿಗೆ ಮಾತ್ರ ಈ ಕಂತಿನ ಹಣ ಲಭ್ಯವಾಗಿದೆ. ಅನರ್ಹರು ಹಾಗೂ ನಿಯಮ ಪಾಲಿಸದವರ ಹಣವನ್ನು ತಡೆಹಿಡಿಯಲಾಗಿದೆ.
ನಿಮ್ಮ ಖಾತೆಗೆ ಹಣ ಬಂದಿದೆಯೇ? ಸ್ಟೇಟಸ್ ಚೆಕ್ ಮಾಡುವುದು ಹೇಗೆ?:
ರೈತರು ಕೃಷಿ ಇಲಾಖೆಯ ಕಚೇರಿ ಅಥವಾ ಬ್ಯಾಂಕ್ಗಳಿಗೆ ಅಲೆಯುವ ಬದಲು, ತಮ್ಮ ಮೊಬೈಲ್ ಮೂಲಕವೇ ಮನೆಯಲ್ಲಿ ಕುಳಿತು ಹಣ ಜಮೆಯಾದ ಬಗ್ಗೆ ಪರಿಶೀಲಿಸಬಹುದು.
- ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ.
- Home Page ನಲ್ಲಿರುವ Know Your Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ಪಿಎಂ ಕಿಸಾನ್ ನೋಂದಣಿ ಸಂಖ್ಯೆ (Registration Number) ಮತ್ತು ಪರದೆಯ ಮೇಲೆ ಕಾಣುವ ಕ್ಯಾಪ್ಚಾ (Captcha) ಕೋಡ್ ನಮೂದಿಸಿ.
- ಬಳಿಕ ‘ಗೆಟ್ ಡೇಟಾ’ (Get Data) ಬಟನ್ ಒತ್ತಿ.
- ಈಗ ನಿಮ್ಮ ಪರದೆಯ ಮೇಲೆ 23ನೇ ಕಂತಿನ ಹಣ ಜಮೆಯಾಗಿರುವ ದಿನಾಂಕ, ಬ್ಯಾಂಕ್ ಖಾತೆಯ ವಿವರ ಹಾಗೂ ಇ-ಕೆವೈಸಿ ಸ್ಟೇಟಸ್ ಕಾಣಿಸಿಕೊಳ್ಳುತ್ತದೆ.
(ಸೂಚನೆ: ನೋಂದಣಿ ಸಂಖ್ಯೆ ಗೊತ್ತಿಲ್ಲದಿದ್ದರೆ, ಅಲ್ಲಿಯೇ ಇರುವ Know your registration no. ಲಿಂಕ್ ಬಳಸಿ ನಿಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆ ಮೂಲಕ ಅದನ್ನು ಪಡೆದುಕೊಳ್ಳಬಹುದು).
ಹಣ ಬರದಿದ್ದರೆ ಏನು ಮಾಡಬೇಕು?: ಒಂದು ವೇಳೆ ನಿಮ್ಮ ಖಾತೆಗೆ ಇನ್ನು ಹಣ ಜಮೆಯಾಗದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಹಾಗೂ ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಇ-ಕೆವೈಸಿ ‘YES’ ಎಂದು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಯಾವುದೇ ತಾಂತ್ರಿಕ ದೋಷವಿದ್ದರೆ ಹತ್ತಿರದ ‘ಸಾಮಾನ್ಯ ಸೇವಾ ಕೇಂದ್ರ’ಗಳಿಗೆ (CSC) ಅಥವಾ ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು. ದೂರುಗಳಿಗಾಗಿ ಕಿಸಾನ್ ಸಹಾಯವಾಣಿ 155261 ಅನ್ನು ಸಂಪರ್ಕಿಸಬಹುದು.
ಈ ಕೇಳಗಿನ ಸುದ್ದಿಗಳನ್ನು ಓದಿ: