ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬೇಕೆಂಬ ವಿಚಾರ ಸದ್ಯ ರಾಜ್ಯಾದ್ಯಂತ ಮಹಿಳೆಯರಲ್ಲಿ ತೀವ್ರ ಸಂಚಲನ ಮೂಡಿಸಿದೆ. ಆದರೆ, ಈ ಬಗ್ಗೆ ನೈಜ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
ಮೃತಪಟ್ಟವರ ಹೆಸರಿನಲ್ಲಿ ಹಾಗೂ ತೆರಿಗೆ ಪಾವತಿಸುತ್ತಿದ್ದರೂ ಅಕ್ರಮವಾಗಿ 2,000 ರೂ. ಪಡೆಯುತ್ತಿದ್ದಾರೆ. ಅಂತಹ ನಕಲಿ ಫಲಾನುಭವಿಗಳಿಗೆ ಬಿಸಿ ಮುಟ್ಟಿಸಲು ಸರ್ಕಾರ ಸಜ್ಜಾಗಿದೆ. ಕೇವಲ ಅರ್ಹರಿಗೆ ಮಾತ್ರ ಈ ಹಣ ತಲುಪಬೇಕು ಎಂಬ ನಿಟ್ಟಿನಲ್ಲಿ, ಇಲಾಖೆಯು ಮರುಪರಿಶೀಲನೆ (Re-verification) ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ
ಸದ್ಯ ಈ ಯೋಜನೆಯ ಲಾಭ ಪಡೆಯುತ್ತಿರುವ 1.28 ಕೋಟಿ ಮಹಿಳೆಯರು ಆತಂಕಪಡುವ ಅಗತ್ಯವಿಲ್ಲ, ಯಾರೂ ಗೊಂದಲಕ್ಕೊಳಗಾಗಬಾರದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮರು ಅರ್ಜಿ ಪ್ರಕ್ರಿಯೆ ಯಾಕೆ?
ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಬರೋಬ್ಬರಿ 72 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಿತರಿಸಲಾಗಿದೆ. ಆದರೆ, ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಭಾರಿ ಅಕ್ರಮ ಬೆಳಕಿಗೆ ಬಂದಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ (IT) ಪಾವತಿದಾರರು ಹಾಗೂ 1 ಲಕ್ಷಕ್ಕೂ ಹೆಚ್ಚು ಮೃತಪಟ್ಟವರ ಹೆಸರಿನಲ್ಲೂ ಹಣ ಡ್ರಾ ಆಗುತ್ತಿದೆ. ಇಂತಹ ನಕಲಿ ಮತ್ತು ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕಾಯಂ ಆಗಿ ಕೈಬಿಡಲು ಈ ನವೀಕರಣ ಪ್ರಕ್ರಿಯೆ ಅನಿವಾರ್ಯವಾಗಿದೆ.
ಯೋಜನೆಯಲ್ಲಿನ ಪ್ರಮುಖ ಬದಲಾವಣೆಗಳೇನು?
- ಸೊಸೆ ಅಥವಾ ಮಳಿಗೆ ಅವಕಾಶ: ಒಂದು ವೇಳೆ ಈ ಹಿಂದೆ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದ ಅತ್ತೆ ಅಥವಾ ತಾಯಿ ನಿಧನರಾಗಿದ್ದರೆ, ಅವರ ಮುಂದಿನ ವಾರಸುದಾರರಾದ ಸೊಸೆ ಅಥವಾ ಮಗಳು ಈ ಯೋಜನೆಯ ಲಾಭ ಪಡೆಯಬಹುದು. ಆದರೆ, ಅವರ ಹೆಸರು ಕಡ್ಡಾಯವಾಗಿ ಅದೇ ಪಡಿತರ ಚೀಟಿಯಲ್ಲಿ (Ration Card) ಇರಬೇಕು.
- ಯಾರು ಅರ್ಹರಲ್ಲ?: ಆದಾಯ ತೆರಿಗೆ ಪಾವತಿಸುವವರು ಹಾಗೂ ಇದೇ ಕಾರಣಕ್ಕಾಗಿ ಬಿಪಿಎಲ್ನಿಂದ (BPL) ಎಪಿಎಲ್ಗೆ (APL) ವರ್ಗಾವಣೆಯಾದ ಕಾರ್ಡ್ದಾರರು ಹೊಸದಾಗಿ ಅರ್ಜಿ ಸಲ್ಲಿಸಿದರೂ ಯೋಜನೆಯ ಸೌಲಭ್ಯ ಸಿಗುವುದಿಲ್ಲ.
ಅರ್ಜಿ ಸಲ್ಲಿಕೆ ಎಲ್ಲಿ ಮಾಡಬೇಕು?
ಹೊಸದಾಗಿ ಅಥವಾ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು ರಾಜ್ಯಾದ್ಯಂತ ಇರುವ 15,000 ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.
- ಬೆಂಗಳೂರು ಒನ್
- ಕರ್ನಾಟಕ ಒನ್
- ಗ್ರಾಮ ಒನ್ ಕೇಂದ್ರಗಳು
(ಸೂಚನೆ: ಯಾವುದೇ ಖಾಸಗಿ ಸೈಬರ್ ಸೆಂಟರ್ಗಳು ಅಥವಾ ಮೊಬೈಲ್ ಆಪ್ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ).
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?
ಏಕಕಾಲಕ್ಕೆ ಲಕ್ಷಾಂತರ ಮಂದಿ ಮುನ್ನುಗ್ಗಿದರೆ ಸರ್ವರ್ ಡೌನ್ ಆಗುವ ಮತ್ತು ತಾಂತ್ರಿಕ ಸಮಸ್ಯೆಗಳು ಎದುರಾಗುವ ಕಾರಣ, ಹಂತ-ಹಂತವಾಗಿ ಅರ್ಜಿ ಸಲ್ಲಿಸಲು ಇಲಾಖೆ ವ್ಯವಸ್ಥೆ ಮಾಡುತ್ತಿದೆ. ಫಲಾನುಭವಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ನೇರವಾಗಿ ಸಂದೇಶ (SMS) ಕಳುಹಿಸುವ ಮೂಲಕ ಪ್ರಕ್ರಿಯೆ ಆರಂಭಿಸಲು ಚಿಂತನೆ ನಡೆಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಬಿಪಿಎಲ್ (BPL) ಅಥವಾ ಎಪಿಎಲ್ (APL) ಪಡಿತರ ಚೀಟಿ.
- ಮನೆ ಯಜಮಾನಿಯ ಹೆಸರು ಮತ್ತು ಆಧಾರ್ ಸಂಖ್ಯೆ.
- ಮನೆ ಯಜಮಾನಿಯ ಬ್ಯಾಂಕ್ ಖಾತೆ ವಿವರ (ಪಾಸ್ಬುಕ್ನ ಜೆರಾಕ್ಸ್ ಪ್ರತಿ).
- ಫಲಾನುಭವಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಫಲಾನುಭವಿಯ ಪತಿಯ ಹೆಸರು ಮತ್ತು ಆಧಾರ್ ಸಂಖ್ಯೆ.
ಬಾಕಿ ಹಣದ ಸ್ಟೇಟಸ್ ಏನು?
ಈಗಾಗಲೇ ಮಾರ್ಚ್ ತಿಂಗಳ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಮೇ ತಿಂಗಳ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ಸಿಕ್ಕ ತಕ್ಷಣ ಖಾತೆಗಳಿಗೆ ಜಮೆಯಾಗಲಿದೆ. ಈ ಎಲ್ಲಾ ಬಾಕಿ ಕಂತುಗಳು ಬಿಡುಗಡೆಯಾದ ಬಳಿಕವಷ್ಟೇ ಮರು-ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಗಲಿದೆ.
ಈ ಕೇಳಗಿನ ಸುದ್ದಿಗಳನ್ನು ಓದಿ:
ಗೃಹಲಕ್ಷ್ಮಿ, ಗೃಹಜ್ಯೋತಿ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ: ಸಿಎಂ ಡಿಕೆಶಿ ಹೊಸ ರೂಲ್ಸ್
ಗೃಹಲಕ್ಷ್ಮಿ ಯೋಜನೆ ರದ್ದತಿ ವದಂತಿಗೆ ಬ್ರೇಕ್: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ