ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ (GruhaLakshmi Scheme) ಹಣವನ್ನು ಮಹಿಳೆಯರು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಹಿಳೆಯೊಬ್ಬರು ಸಾಕ್ಷಿಯಾಗಿದ್ದಾರೆ. ಪ್ರತಿ ತಿಂಗಳು ಸರ್ಕಾರದಿಂದ ಬರುತ್ತಿರುವ ಹಣವನ್ನು ಉಳಿತಾಯ ಮಾಡಿ, ತಮ್ಮ ಮನೆಗೆ ಅಗತ್ಯವಿದ್ದ ಹೊಸ ಫ್ರಿಡ್ಜ್ (Refrigerator) ಖರೀದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ಅವರೇ ಈ ಸಾಧಕಿ. ಇವರಿಗೆ ಪ್ರತಿ ತಿಂಗಳು ಸರ್ಕಾರದಿಂದ 2,000 ರೂ. ಗೃಹಲಕ್ಷ್ಮಿ ಹಣ ಜಮೆಯಾಗುತ್ತಿತ್ತು. ಈ ಹಣವನ್ನು ಅನಗತ್ಯವಾಗಿ ಖರ್ಚು ಮಾಡದೆ, “ಹನಿ ಹನಿಗೂಡಿದರೆ ಹಳ್ಳ” ಎಂಬಂತೆ ಶ್ರದ್ಧೆಯಿಂದ ಕೂಡಿಟ್ಟಿದ್ದಾರೆ. ಹೀಗೆ ಉಳಿತಾಯ ಮಾಡಿದ ಹಣದಲ್ಲಿ ಇಂದು ತಮ್ಮ ಮನೆಗೆ ಹೊಚ್ಚ ಹೊಸ ಫ್ರಿಡ್ಜ್ ಖರೀದಿಸಿ ಸಂಭ್ರಮಿಸಿದ್ದಾರೆ.
ಸರ್ಕಾರದ ಆಶಯ ಈಡೇರಿದ ಕ್ಷಣ: ಹನುಮಮ್ಮ ಅವರ ಈ ಕಾರ್ಯ ಕೇವಲ ಫ್ರಿಡ್ಜ್ ಖರೀದಿಗೆ ಸೀಮಿತವಾಗಿಲ್ಲ, ಅದು ಗ್ರಾಮೀಣ ಮಹಿಳೆಯೊಬ್ಬರ ಆರ್ಥಿಕ ಶಿಸ್ತನ್ನು ತೋರಿಸುತ್ತದೆ. “ಗೃಹಲಕ್ಷ್ಮಿ ಯೋಜನೆ ಕೇವಲ ಆರ್ಥಿಕ ನೆರವಲ್ಲ, ಅದು ಮಹಿಳೆಯರ ಕನಸುಗಳಿಗೆ ಜೀವ ನೀಡುವ ಶಕ್ತಿ. ರಾಜ್ಯದ ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಬೇಕು ಎಂಬ ನಮ್ಮ ಸರ್ಕಾರದ ಆಶಯ ಇಂದು ಹಳ್ಳಿಗಳಲ್ಲಿ ಸಾಕಾರಗೊಳ್ಳುತ್ತಿದೆ,” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹನುಮಮ್ಮ ಅವರ ಮುಖದಲ್ಲಿನ ನಗು ಮತ್ತು ಸಣ್ಣ ಉಳಿತಾಯದ ಮೂಲಕ ಅವರು ತಂದ ಈ ದೊಡ್ಡ ಬದಲಾವಣೆ, ಕೋಟ್ಯಂತರ ಫಲಾನುಭವಿಗಳಿಗೆ ಸ್ಫೂರ್ತಿಯಾಗಿದೆ. “ನುಡಿದಂತೆ ನಡೆದಿದ್ದೇವೆ, ಮಹಿಳೆಯರ ಬಾಳಿನಲ್ಲಿ ಹೊಸ ಬೆಳಕು ತಂದಿದ್ದೇವೆ” ಎಂದು ಸಚಿವೆ ಹೆಬ್ಬಾಳ್ಕರ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇತರೆ ಮಾಹಿತಿಗಳನ್ನು ಓದಿ:
Udyogini Scheme: 1.5 ಲಕ್ಷ ರೂ. ಸಹಾಯಧನಕ್ಕೆ ಆನ್ಲೈನ್ ಅರ್ಜಿ ಆಹ್ವಾನ