ಬೆಳಗಾವಿ: ಕಳೆದ ಎರಡು ವರ್ಷಗಳಿಂದ ಹೊಸ ರೇಷನ್ ಕಾರ್ಡ್ಗಾಗಿ (New Ration Card) ಅರ್ಜಿ ಸಲ್ಲಿಸಿ ಕಾಯುತ್ತಿರುವ ರಾಜ್ಯದ ಜನತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸಿಹಿ ಸುದ್ದಿ ನೀಡಿದ್ದಾರೆ.
ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ ಬಂದಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಗೆ ವೇಗ ನೀಡಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಬಾಕಿ ಇರುವ ಎಲ್ಲಾ ಅರ್ಹ ಅರ್ಜಿಗಳನ್ನು ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸುವರ್ಣ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.
ಸುದ್ದಿಯ ಪ್ರಮುಖ ಮುಖ್ಯಾಂಶಗಳು:
2.95 ಲಕ್ಷ ಅರ್ಜಿಗಳು ಕ್ಲಿಯರ್: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ (BPL) ಕಾರ್ಡ್ ಪಡೆಯಲು ಒಟ್ಟು 3.96 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ದಾಖಲೆಗಳು ಸರಿಯಿದ್ದ 2.95 ಲಕ್ಷ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದಿರುವ ಅರ್ಜಿಗಳನ್ನು ಮುಂದಿನ ಒಂದು ತಿಂಗಳೊಳಗೆ ಪರಿಶೀಲಿಸಿ, ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು.
ಕಾರ್ಡ್ ಪಡೆಯುವುದು ಹೇಗೆ? ರೇಷನ್ ಕಾರ್ಡ್ ಸ್ಥಿತಿಗತಿಯನ್ನು ತಿಳಿಯಲು ಅಲೆದಾಡುವ ತಪ್ಪಿಸಲು ಇಲಾಖೆ ಸರಳ ಮಾರ್ಗ ಸೂಚಿಸಿದೆ.
- ಅರ್ಜಿದಾರರು ತಮ್ಮ ತಾಲೂಕು ಕಚೇರಿಯ ಆಹಾರ ಇಲಾಖೆ ಅಥವಾ ಜಿಲ್ಲಾ/ನಗರಾಭಿವೃದ್ಧಿ ವ್ಯಾಪ್ತಿಯ ಆಹಾರ ಇಲಾಖೆ ಉಪ ನಿರ್ದೇಶಕರ (DD) ಕಚೇರಿಗೆ ಭೇಟಿ ನೀಡಬೇಕು.
- ಅಲ್ಲಿ ನಿಮ್ಮ ಅರ್ಜಿ ಅನುಮೋದನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
- ಒಂದು ವೇಳೆ ಅನುಮೋದನೆಯಾಗಿದ್ದರೆ, ಅಗತ್ಯ ದಾಖಲೆಗಳನ್ನು ಸ್ಥಳದಲ್ಲೇ ಪರಿಶೀಲನೆಗೆ ನೀಡಿ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನರ್ಹರ ಕಾರ್ಡ್ ರದ್ದು: ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ. ಅಂತಹ ಅನರ್ಹ ಕಾರ್ಡ್ಗಳನ್ನು ರದ್ದುಪಡಿಸಿ, ಅವುಗಳನ್ನು ಎಪಿಎಲ್ (APL) ಕಾರ್ಡ್ಗಳಾಗಿ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ನಿಜವಾದ ಬಡವರಿಗೆ (ಅನ್ನ ಸುವಿಧಾ ಯೋಜನೆ ಅಡಿ) ಸೌಲಭ್ಯ ಸಿಗುವಂತೆ ಮಾಡಲಾಗುವುದು.
3,517 ಹೊಸ ನ್ಯಾಯಬೆಲೆ ಅಂಗಡಿಗಳು: ಜನಸಂಖ್ಯೆಗೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಬಜೆಟ್ನಲ್ಲಿ ಘೋಷಿಸಿದಂತೆ ಕ್ರಮ ಕೈಗೊಳ್ಳಲಾಗಿದೆ.
- ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗಳು ಈ ತಿಂಗಳ ಅಂತ್ಯದೊಳಗೆ ಸಭೆ ನಡೆಸಿ ಪ್ರಕ್ರಿಯೆ ಪೂರ್ಣಗೊಳಿಸಲಿವೆ.
- ಹೊಸ ಒಳ ಮೀಸಲಾತಿ ಅನ್ವಯ, ರಾಜ್ಯದಲ್ಲಿ 3,517 ನ್ಯಾಯಬೆಲೆ ಅಂಗಡಿಗಳನ್ನು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವರ್ಗದವರಿಗೆ ಮಂಜೂರು ಮಾಡಲಾಗುವುದು.
ಧಾನ್ಯಗಳ ಕೊರತೆ ಇಲ್ಲ: ರಾಜ್ಯದಲ್ಲಿ ರಾಗಿ ಮತ್ತು ಜೋಳದ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ಭಾಗದಲ್ಲಿ ದವಸ-ಧಾನ್ಯಗಳ ಕೊರತೆ ಉಂಟಾಗದಂತೆ ಸರ್ಕಾರ ಎಚ್ಚರವಹಿಸಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಇತರೆ ಮಾಹಿತಿಗಳನ್ನು ಓದಿ:
ವಸತಿ ಯೋಜನೆ ಸಹಾಯಧನ 4 ಲಕ್ಷ ರೂ.ಗೆ ಏರಿಕೆ? ಸಚಿವರಿಂದ ಮಹತ್ವದ ಹೇಳಿಕೆ