ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ತೈಲ ಕಂಪನಿಗಳು ವಾರದ ಆರಂಭದಲ್ಲೇ ಮತ್ತೊಂದು ಬಿಗ್ ಶಾಕ್ ನೀಡಿವೆ. ಕೇವಲ ಎರಡು ವಾರಗಳಿಗೂ ಕಡಿಮೆ ಅವಧಿಯಲ್ಲಿ ಬರೋಬ್ಬರಿ ನಾಲ್ಕನೇ ಬಾರಿಗೆ ಇಂಧನ ದರವನ್ನು ಹೆಚ್ಚಳ (Petrol Price Hike) ಮಾಡಲಾಗಿದ್ದು, ಜನಸಾಮಾನ್ಯರು ಆರ್ಥಿಕ ಹೊರೆಯಿಂದ ತತ್ತರಿಸುವಂತಾಗಿದೆ.
ಮೇ 15 ರ ನಂತರ ಇಂಧನ ದರ ಪರಿಷ್ಕರಣೆಯನ್ನು ತೈಲ ಕಂಪನಿಗಳು ಚುರುಕುಗೊಳಿಸಿವೆ. ಅಂದಿನಿಂದ ಇಂದಿನವರೆಗೆ ಒಟ್ಟಾರೆಯಾಗಿ 7 ರೂಪಾಯಿಗೂ ಅಧಿಕ ಬೆಲೆ ಹೆಚ್ಚಳವಾಗಿದೆ. ಇಂದಿನ ಹೊಸ ದರಗಳ ಅನ್ವಯ, ಪೆಟ್ರೋಲ್ ಮೇಲೆ 2.61 ರೂ. ಹಾಗೂ ಡೀಸೆಲ್ ಮೇಲೆ 2.71 ರೂ. ನಷ್ಟು ದಿಢೀರ್ ಏರಿಕೆ ಮಾಡಲಾಗಿದೆ.
ಬೆಂಗಳೂರು ಹಾಗೂ ದೆಹಲಿಯಲ್ಲಿ ಇಂದಿನ ದರಗಳೆಷ್ಟು?
ಸತತವಾಗಿ ದರ ಹೆಚ್ಚಳ ಮಾಡುತ್ತಿರುವ ಪರಿಣಾಮ, ದೇಶದ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ಮೂರಂಕಿ (100 ರೂ.) ಗಡಿ ದಾಟಿ 102.12 ರೂಪಾಯಿಗೆ ತಲುಪಿದೆ. ಹಾಗೆಯೇ ಡೀಸೆಲ್ 95.20 ರೂಪಾಯಿಗೆ ಮಾರಾಟವಾಗುತ್ತಿದೆ.
ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಸಹ ತೈಲ ದರದಲ್ಲಿ ಭಾರಿ ಏರಿಕೆ ಕಂಡಿದೆ. ನಗರದಲ್ಲಿ ಇಂದು ಪೆಟ್ರೋಲ್ ದರ 2.83 ರೂ. ಹಾಗೂ ಡೀಸೆಲ್ 2.81 ರೂ. ನಷ್ಟು ಹೆಚ್ಚಳವಾಗಿದೆ.
- ಬೆಂಗಳೂರು ನಗರ: ಲೀಟರ್ ಪೆಟ್ರೋಲ್ ಬೆಲೆ ₹ 110.93 ಹಾಗೂ ಡೀಸೆಲ್ ಬೆಲೆ ₹ 98.80 ಇದೆ.
- ಬೆಂಗಳೂರು ಗ್ರಾಮಾಂತರ: ಲೀಟರ್ ಪೆಟ್ರೋಲ್ ಬೆಲೆ ₹ 111.03 ಹಾಗೂ ಡೀಸೆಲ್ ಬೆಲೆ ₹ 98.93 ಇದೆ.
ಏಕಾಏಕಿ ತೈಲ ಬೆಲೆ ಏರಿಕೆಯಾಗಲು ಕಾರಣವೇನು?
ಭಾರತವು ತನಗೆ ಬೇಕಾದ ಶೇ. 85 ರಷ್ಟು ಕಚ್ಚಾ ತೈಲವನ್ನು (Crude Oil) ಅನ್ಯ ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿವೆ:
- ಅಮೆರಿಕ ಮತ್ತು ಇರಾನ್ ರಾಷ್ಟ್ರಗಳ ನಡುವಿನ ಭೌಗೋಳಿಕ-ರಾಜಕೀಯ ತಿಕ್ಕಾಟ.
- ಹಾರ್ಮುಜ್ ಜಲಸಂಧಿಯಲ್ಲಿ ಎದುರಾಗಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಸಾಗಣೆ ವ್ಯವಸ್ಥೆಯಲ್ಲಿ ಆಗಿರುವ ವ್ಯತ್ಯಯ.
- ಹಿಂದೆ ಪ್ರತಿ ಬ್ಯಾರೆಲ್ಗೆ 65-70 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ, ಪ್ರಸ್ತುತ 110-115 ಡಾಲರ್ಗೆ ತಲುಪಿದೆ. ಜೊತೆಗೆ ರೂಪಾಯಿ ಮೌಲ್ಯ ಕುಸಿತದಿಂದಾಗಿ ಆಮದು ವೆಚ್ಚ ವಿಪರೀತವಾಗಿ ಹೆಚ್ಚಾಗಿದ್ದು, ಆ ನಷ್ಟವನ್ನು ಸರಿದೂಗಿಸಲು ಬೆಲೆ ಏರಿಸಲಾಗಿದೆ ಎಂದು ತೈಲ ಕಂಪನಿಗಳು ಸಮರ್ಥಿಸಿಕೊಂಡಿವೆ.
ಅಗತ್ಯ ವಸ್ತುಗಳ ದರ ಏರಿಕೆಯ ಆತಂಕ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದೇ ರೀತಿ ಏರುತ್ತಾ ಹೋದರೆ ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚ ದುಬಾರಿಯಾಗಲಿದೆ. ಇದರ ನೇರ ಪರಿಣಾಮ ದಿನಸಿ, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಮೇಲೂ ಬೀರಲಿದ್ದು, ಜನಸಾಮಾನ್ಯರಿಗೆ ಜೀವನ ನಿರ್ವಹಣೆಯೇ ಕಷ್ಟವಾಗಲಿದೆ. “ಸರ್ಕಾರ ತಕ್ಷಣವೇ ಇಂಧನದ ಮೇಲಿನ ಸುಂಕವನ್ನು ಕಡಿಮೆ ಮಾಡಿ ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು” ಎಂದು ಕ್ಯಾಬ್ ಹಾಗೂ ಟ್ರಾವೆಲ್ಸ್ ಮಾಲೀಕರು ಆಗ್ರಹಿಸಿದ್ದಾರೆ.
ಈ ಕೇಳಗಿನ ಸುದ್ದಿಗಳನ್ನು ಓದಿ:
ಸುಕನ್ಯಾ ಸಮೃದ್ಧಿ ಯೋಜನೆ: ದಿನಕ್ಕೆ ₹100 ಉಳಿಸಿ, ಲಕ್ಷ-ಲಕ್ಷ ಹಣ ಪಡೆಯಿರಿ