ದೇಶದ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಹಗಲಿರುಳು ಬೆವರು ಸುರಿಸುವ ಶ್ರಮಿಕರ ದಿನವೇ ‘ಕಾರ್ಮಿಕ ದಿನಾಚರಣೆ’. 19ನೇ ಶತಮಾನದಲ್ಲಿ ಅಮೆರಿಕದಲ್ಲಿ “ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ” ಎಂಬ ಹಕ್ಕಿಗಾಗಿ ನಡೆದ ಐತಿಹಾಸಿಕ ಹೋರಾಟದ ಫಲವಾಗಿ ಮೇ 1 ರಂದು ವಿಶ್ವದೆಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಈ ಆಚರಣೆ 1923ರಿಂದಲೇ ಶುರುವಾಗಿದೆ.
ಕಾರ್ಮಿಕ ದಿನಾಚರಣೆಯ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು “ಶ್ರಮಿಕರ ಶ್ರಮವೇ ರಾಜ್ಯದ ಶಕ್ತಿ” ಎಂಬ ಘೋಷವಾಕ್ಯದೊಂದಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಹತ್ತು-ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
Labour Card Benefits In Karnataka:
‘ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ ವತಿಯಿಂದ ನೋಂದಾಯಿತ ಕಾರ್ಮಿಕರಿಗೆ ಸಿಗುವ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಸೌಲಭ್ಯಗಳ ಸಂಪೂರ್ಣ ವಿವರ ಇಲ್ಲಿದೆ.
ವೈದ್ಯಕೀಯ ಹಾಗೂ ಆರೋಗ್ಯ ಸೌಲಭ್ಯಗಳು:
- ಆಸ್ಪತ್ರೆ ವೆಚ್ಚ: ಕಾರ್ಮಿಕರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೆ, ಚಿಕಿತ್ಸಾ ವೆಚ್ಚವಾಗಿ ಪ್ರತಿದಿನ ಗರಿಷ್ಠ 20,000 ರೂ. ವರೆಗೆ ಧನಸಹಾಯ ಪಡೆಯಬಹುದು. (ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 6 ತಿಂಗಳೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ).
- ಅಂಗವೈಕಲ್ಯಕ್ಕೆ ಪರಿಹಾರ: ಕೆಲಸ ಮಾಡುವಾಗ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ 2 ಲಕ್ಷ ರೂ. ಪರಿಹಾರ ಹಾಗೂ ಮಾಸಿಕ 2,000 ರೂ. ಪಿಂಚಣಿ ಸಿಗಲಿದೆ. ಭಾಗಶಃ ಅಂಗವೈಕಲ್ಯ ಉಂಟಾದರೆ 1 ಲಕ್ಷ ರೂ. ಪರಿಹಾರ ಲಭ್ಯವಿದೆ.
ವೃದ್ಧಾಪ್ಯ ಹಾಗೂ ಕುಟುಂಬಕ್ಕೆ ಆರ್ಥಿಕ ಭದ್ರತೆ:
- ನಿವೃತ್ತಿ ವೇತನ (ಪಿಂಚಣಿ): ಮಂಡಳಿಯಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಸದಸ್ಯತ್ವ ಹೊಂದಿರುವ ಕಾರ್ಮಿಕರಿಗೆ 60 ವರ್ಷ ವಯಸ್ಸಾದ ಬಳಿಕ, ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 3,000 ರೂ. ಗಳ ಪಿಂಚಣಿ ನೀಡಲಾಗುತ್ತದೆ.
- ಕುಟುಂಬ ಪಿಂಚಣಿ: ಒಂದು ವೇಳೆ ಪಿಂಚಣಿ ಪಡೆಯುತ್ತಿದ್ದ ಫಲಾನುಭವಿ ಮರಣಹೊಂದಿದರೆ, ಅವರ ಜೀವನಸಾತಿಗೆ (ಪತಿ ಅಥವಾ ಪತ್ನಿಗೆ) ಮಾಸಿಕ 1,500 ರೂ.ಗಳ ಆರ್ಥಿಕ ನೆರವು ಮುಂದುವರಿಯಲಿದೆ.
- ಮರಣ ಹಾಗೂ ಅಂತ್ಯಕ್ರಿಯೆ ಪರಿಹಾರ: ಕೆಲಸದ ಅವಧಿಯನ್ನು ಹೊರತುಪಡಿಸಿ ಬೇರೆ ಯಾವುದೇ ಆಕಸ್ಮಿಕ ಅಪಘಾತದಲ್ಲಿ ಕಾರ್ಮಿಕರು ಮೃತಪಟ್ಟರೆ, ಅವರ ಕುಟುಂಬಕ್ಕೆ 8 ಲಕ್ಷ ರೂ. ವರೆಗೆ ಪರಿಹಾರ ಸಿಗಲಿದೆ. (ಆದರೆ, ಆತ್ಮಹತ್ಯೆ, ಡ್ರಗ್ಸ್ ಸೇವನೆ ಮತ್ತು ಅಪರಾಧ ಕೃತ್ಯಗಳಿಗೆ ಇದು ಅನ್ವಯಿಸುವುದಿಲ್ಲ).
ಮಹಿಳಾ ಕಾರ್ಮಿಕರಿಗೆ ವಿಶೇಷ ಆದ್ಯತೆ:
- ಬಾಣಂತಿ ಭತ್ಯೆ: ಮಹಿಳಾ ಕಾರ್ಮಿಕರ ಮೊದಲ ಎರಡು ಹೆರಿಗೆಗಳಿಗೆ ಆರ್ಥಿಕ ಹೊರೆ ತಗ್ಗಿಸಲು ತಲಾ 50,000 ರೂ. ಗಳ ಹೆರಿಗೆ ಭತ್ಯೆ ನೀಡಲಾಗುತ್ತದೆ.
- ತಾಯಿ-ಮಗು ಸಹಾಯ ಹಸ್ತ: ಮಗು ಹುಟ್ಟಿದ ದಿನದಿಂದ ಮೂರು ವರ್ಷ ತುಂಬುವವರೆಗೆ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 500 ರೂ. (ಒಟ್ಟು 6,000 ರೂ.) ಸಹಾಯಧನವನ್ನು ಮಂಡಳಿ ಒದಗಿಸುತ್ತದೆ.
ಮಕ್ಕಳ ಭವಿಷ್ಯ ಹಾಗೂ ವಿವಾಹಕ್ಕೆ ನೆರವು:
- ಓದಿಗೆ ಪ್ರೋತ್ಸಾಹ: ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಮಂಡಳಿಯಿಂದ ಸ್ಕಾಲರ್ಶಿಪ್ ಸೌಲಭ್ಯವಿದೆ.
- ಮದುವೆ ಸಹಾಯಧನ: ಕಾರ್ಮಿಕರು ತಮ್ಮ ಸ್ವಂತ ಮದುವೆಗೆ ಅಥವಾ ತಮ್ಮ ಇಬ್ಬರು ಅವಲಂಬಿತ ಮಕ್ಕಳ ವಿವಾಹ ಕಾರ್ಯಕ್ಕೆ ತಲಾ 60,000 ರೂ. ಗಳ ಧನಸಹಾಯ ಪಡೆಯಬಹುದು.
ಹೊಸ ಉಪಕ್ರಮಗಳು ಹಾಗೂ ಇತರೆ ಸೌಲಭ್ಯಗಳು: ಸರ್ಕಾರವು ಗಿಗ್ ಕಾರ್ಮಿಕರಿಗೆ, ಪತ್ರಿಕಾ ವಿತರಕರಿಗೆ ಹಾಗೂ 102 ವಿವಿಧ ಅಸಂಘಟಿತ ವಲಯದ ಕಾರ್ಮಿಕರಿಗೂ ವಿಶೇಷ ವಿಮೆ ಮತ್ತು ಕಲ್ಯಾಣ ಮಂಡಳಿಗಳನ್ನು ರೂಪಿಸಿದೆ. ತುರ್ತು ಚಿಕಿತ್ಸೆಗಾಗಿ 100 ಸಂಚಾರಿ ಕ್ಲಿನಿಕ್ಗಳನ್ನು ಪರಿಚಯಿಸಿದೆ.
ಜೊತೆಗೆ, ಬೆಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಿಎಂಟಿಸಿ ಬಸ್ಗಳಲ್ಲಿ ಉಚಿತವಾಗಿ ಓಡಾಡಲು ಮಾಸಿಕ ಬಸ್ ಪಾಸ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ನೆನಪಿರಲಿ: ಈ ಮೇಲಿನ ಯಾವುದೇ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ಕಲ್ಯಾಣ ಮಂಡಳಿಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಿಸಿಕೊಂಡಿರಬೇಕು ಮತ್ತು ಪ್ರತಿ ವರ್ಷ ಕಾರ್ಡ್ ಅನ್ನು ನವೀಕರಿಸಿಕೊಳ್ಳಬೇಕು (Renew). ಹೆಚ್ಚಿನ ಮಾಹಿತಿಗಾಗಿ ರಾಜ್ಯ ಸರ್ಕಾರದ ಅಧಿಕೃತ ಕಾರ್ಮಿಕ ಸಹಾಯವಾಣಿ: 155214 ಸಂಖ್ಯೆಗೆ ಕರೆ ಮಾಡಬಹುದು.
E-Swathu 2.0: ಇ-ಸ್ವತ್ತು ಅರ್ಜಿಗಳ ವಿಲೇವಾರಿಗೆ ವೇಗ: ಸಚಿವ ಪ್ರಿಯಾಂಕ್ ಖರ್ಗೆ