ರಾಜ್ಯದ ಬಿಪಿಎಲ್ (BPL) ಹಾಗೂ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಮಹತ್ವದ ಸಿಹಿಸುದ್ದಿಯೊಂದನ್ನು ನೀಡಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಅಡಿಯಲ್ಲಿ ಮೇ ಹಾಗೂ ಜೂನ್ (2026) ತಿಂಗಳ ಪಡಿತರವನ್ನು ಒಂದೇ ಬಾರಿಗೆ ಮೇ ತಿಂಗಳಲ್ಲೇ ವಿತರಿಸಲು ನಿರ್ಧರಿಸಲಾಗಿದೆ.
ಯಾವ ಕಾರ್ಡ್ಗೆ ಎಷ್ಟು ಪಡಿತರ? ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ನೀಡುತ್ತಿರುವುದರಿಂದ ಪಡಿತರ ಪ್ರಮಾಣದಲ್ಲಿಯೂ ದುಪ್ಪಟ್ಟು ಏರಿಕೆಯಾಗಲಿದೆ.
- ಅಂತ್ಯೋದಯ (AAY) ಕಾರ್ಡ್: ಪ್ರತಿ ತಿಂಗಳಿಗೆ 35 ಕೆ.ಜಿ.ಯಂತೆ ಎರಡು ತಿಂಗಳಿಗೆ ಒಟ್ಟು 70 ಕೆ.ಜಿ. ಅಕ್ಕಿಯನ್ನು ಒಂದು ಕಾರ್ಡ್ಗೆ ನೀಡಲಾಗುವುದು.
- ಬಿಪಿಎಲ್ (BPL/PHH) ಕಾರ್ಡ್: ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆ.ಜಿ.ಯಂತೆ, ಎರಡು ತಿಂಗಳಿಗೆ ಸೇರಿ ತಲಾ 10 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುವುದು.
ಬೆಂಗಳೂರು ದಕ್ಷಿಣ ಹಾಗೂ ರಾಮನಗರ ವ್ಯಾಪ್ತಿಯಲ್ಲಿ ರಾಗಿ ವಿತರಣೆ: ರಾಜ್ಯದ ಭೌಗೋಳಿಕ ಆಹಾರ ಪದ್ಧತಿಗೆ ಅನುಗುಣವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಕೇಂದ್ರ ವ್ಯಾಪ್ತಿ ಹಾಗೂ ರಾಮನಗರ ಜಿಲ್ಲೆಯಲ್ಲಿ ಅಕ್ಕಿಯ ಜೊತೆಗೆ ರಾಗಿಯನ್ನು ಕೂಡ ವಿತರಿಸಲಾಗುತ್ತಿದೆ.
ಈ ಭಾಗದ ಅಂತ್ಯೋದಯ ಕಾರ್ಡ್ದಾರರಿಗೆ 42 ಕೆ.ಜಿ. ರಾಗಿ ಮತ್ತು 28 ಕೆ.ಜಿ. ಅಕ್ಕಿ (ಒಟ್ಟು 70 ಕೆ.ಜಿ.) ನೀಡಲಾಗುವುದು. ಅಂತೆಯೇ, ಬಿಪಿಎಲ್ ಕಾರ್ಡ್ನ ಪ್ರತಿ ಸದಸ್ಯನಿಗೆ 6 ಕೆ.ಜಿ. ರಾಗಿ ಮತ್ತು 4 ಕೆ.ಜಿ. ಅಕ್ಕಿ (ಒಟ್ಟು 10 ಕೆ.ಜಿ.) ವಿತರಿಸಲಾಗುತ್ತದೆ.
2 ಬಾರಿ ಬಯೋಮೆಟ್ರಿಕ್ ಕಡ್ಡಾಯ ಹಾಗೂ ಸರ್ವರ್ ಸಮಯ ಬದಲು: ಒಂದೇ ಬಾರಿಗೆ ಎರಡು ತಿಂಗಳ ಪಡಿತರ ವಿತರಿಸುತ್ತಿರುವುದರಿಂದ, ತಾಂತ್ರಿಕ ದಾಖಲೀಕರಣಕ್ಕಾಗಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಎರಡು ಬಾರಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ನೀಡಬೇಕು. ಎರಡು ಬಾರಿ ಬೆರಳು ಮುದ್ರೆ ನೀಡಿದ ನಂತರವಷ್ಟೇ ಪೂರ್ಣ ಪ್ರಮಾಣದ ಧಾನ್ಯ ಲಭ್ಯವಾಗಲಿದೆ.
ಸರ್ವರ್ ಸಮಸ್ಯೆ ಹಾಗೂ ಜನದಟ್ಟಣೆಯನ್ನು ತಪ್ಪಿಸಲು, ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅನ್ನಸುವಿಧಾ ಯೋಜನೆಯ ಫಲಾನುಭವಿಗಳು ಸಹ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ, ಎರಡು ಬಾರಿ ಬಯೋಮೆಟ್ರಿಕ್ ನೀಡಿ ತಮ್ಮ ಪಡಿತರವನ್ನು ಪಡೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.