ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಗಳಿಗೆ ರಾಜ್ಯ ಸರ್ಕಾರವು ತೆರೆ ಎಳೆದಿದೆ. ಮಾನ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ಏಪ್ರಿಲ್ 27, 2026 ರಂದು ಪರಿಷ್ಕೃತ ಒಳಮೀಸಲಾತಿ ಹಂಚಿಕೆಯ ಅಧಿಕೃತ ಆದೇಶವನ್ನು ಹೊರಡಿಸಿದೆ.
ಈ ಹೊಸ ಆದೇಶದ ಪ್ರಕಾರ, ಸದ್ಯ ಚಾಲ್ತಿಯಲ್ಲಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಪರಿಷ್ಕೃತ ಒಳಮೀಸಲಾತಿಯೊಂದಿಗೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಸೂಚಿಸಲಾಗಿದೆ. ಇದು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ, ವಿಶೇಷವಾಗಿ ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡಿರುವ 56,432 ಹುದ್ದೆಗಳ ನೇಮಕಾತಿಗೆ ದಾರಿ ಮಾಡಿಕೊಟ್ಟಿದೆ.
ಶೇ. 17 ರಿಂದ 15ಕ್ಕೆ ಸೀಮಿತವಾದ ಮೀಸಲಾತಿ: ಕಾರಣವೇನು?
ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ (ಸಂಖ್ಯೆ: 200448/2025) ಯಲ್ಲಿ ನೀಡಲಾದ ಮಧ್ಯಂತರ ಆದೇಶದನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ.
ಫೆಬ್ರವರಿ 26, 2026 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ 1995ರ ಆದೇಶದಂತೆ (ಶೇ. 50ರ ಒಟ್ಟು ಮೀಸಲಾತಿ) ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು. ಇದರಿಂದಾಗಿ ನೇಮಕಾತಿ ಹಾಗೂ ಪ್ರವೇಶಾತಿಗಳಲ್ಲಿ ಪರಿಶಿಷ್ಟ ಜಾತಿಗಳ (SC) ಮೀಸಲಾತಿ ಪ್ರಮಾಣವನ್ನು ತಾತ್ಕಾಲಿಕವಾಗಿ ಶೇಕಡಾ 17 ರಿಂದ 15ಕ್ಕೆ ಸೀಮಿತಗೊಳಿಸಲಾಗಿದೆ.
ಹೊಸ ಒಳಮೀಸಲಾತಿ ಹಂಚಿಕೆ ಹೇಗಿದೆ?
ಒಟ್ಟು ಶೇಕಡಾ 15ರಷ್ಟು ಮೀಸಲಾತಿಯನ್ನು ಎಸ್ಸಿ ಸಮುದಾಯದೊಳಗಿನ ವಿವಿಧ ಪ್ರವರ್ಗಗಳಿಗೆ ಈ ಕೆಳಕಂಡಂತೆ ಹಂಚಿಕೆ ಮಾಡಲಾಗಿದೆ:
- ಪ್ರವರ್ಗ-ಎ: ಶೇಕಡಾ 5.25 ರಷ್ಟು ಮೀಸಲಾತಿ ನೀಡಲಾಗಿದೆ.
- ಪ್ರವರ್ಗ-ಬಿ: ಶೇಕಡಾ 5.25 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ.
- ಪ್ರವರ್ಗ-ಸಿ: ಶೇಕಡಾ 4.5 ರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ.
ಪ್ರವರ್ಗ-ಸಿ ಗೆ ವಿಶೇಷ ಷರತ್ತು: ಪ್ರವರ್ಗ-ಸಿಗೆ ಲಭ್ಯವಾಗುವ ಹುದ್ದೆಗಳು ಅಥವಾ ಪ್ರವೇಶಾತಿ ಸೀಟುಗಳಲ್ಲಿ ಶೇಕಡಾ 20 ರಷ್ಟನ್ನು ಪರಿಶಿಷ್ಟ ಜಾತಿಗಳಲ್ಲಿನ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಕಡ್ಡಾಯವಾಗಿ ಮೀಸಲಿರಿಸಬೇಕು. ಒಂದು ವೇಳೆ ಈ 59 ಜಾತಿಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮಾತ್ರ, ಆ ಸ್ಥಾನಗಳನ್ನು ಪ್ರವರ್ಗ ‘ಸಿ’ ಯಲ್ಲಿರುವ ಇತರೆ ಜಾತಿಗಳಿಗೆ ನೀಡಲು ಸೂಚಿಸಲಾಗಿದೆ.
ನೇಮಕಾತಿ ನಿಯಮಗಳಲ್ಲಿನ ಇತರ ಪ್ರಮುಖ ಬದಲಾವಣೆಗಳು:
- 400 ಬಿಂದುಗಳ ವರ್ತುಲ: ಈ ಮೀಸಲಾತಿ ಪ್ರಮಾಣವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನೇಮಕಾತಿಗಳಲ್ಲಿ 400 ಬಿಂದುಗಳ (Roster points) ವರ್ತುಲವನ್ನು ಪಾಲಿಸಬೇಕು.
- ಪರಿಷ್ಕೃತ ಅಧಿಸೂಚನೆ ಕಡ್ಡಾಯ: ಈ ಹಿಂದೆ ಒಳಮೀಸಲಾತಿ ಅಳವಡಿಸದೆ ಹೊರಡಿಸಲಾಗಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣವೇ ಹಿಂಪಡೆಯಬೇಕು. ಬಳಿಕ ಹೊಸ ಒಳಮೀಸಲಾತಿಯನ್ನು ಅಳವಡಿಸಿಕೊಂಡು ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಿ, ನೇಮಕಾತಿ ಮಾಡಬೇಕು.
- ಕಡಿಮೆ ಬಿಂದುಗಳಿದ್ದರೆ: ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಎಸ್ಸಿ ಬಿಂದುಗಳು ಲಭ್ಯವಿದ್ದಲ್ಲಿ, ಆ ಹುದ್ದೆಗಳನ್ನು ‘ಪರಿಶಿಷ್ಟ ಜಾತಿ ಸಾಮಾನ್ಯ’ (SC General) ಎಂದು ಪರಿಗಣಿಸಿ ನೇಮಕಾತಿ ಮಾಡಲಾಗುತ್ತದೆ.
ಮುಂದೆ ಶೇ. 24ರಷ್ಟು ಒಪ್ಪಿಗೆ ಸಿಕ್ರೆ ಏನಾಗುತ್ತೆ?
ಭವಿಷ್ಯದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿಸಲಾಗಿರುವ ಒಟ್ಟು ಶೇಕಡಾ 24ರಷ್ಟು ಮೀಸಲಾತಿ ಪ್ರಮಾಣಕ್ಕೆ ಒಪ್ಪಿಗೆ ನೀಡಿದರೆ, ಉಳಿಕೆಯಾಗುವ ಶೇಕಡಾ 6 ರಷ್ಟು ಹುದ್ದೆಗಳನ್ನು ‘ಬ್ಯಾಕ್ಲಾಗ್ ಹುದ್ದೆಗಳು’ (Backlog posts) ಎಂದು ಪರಿಗಣಿಸಿ ಭರ್ತಿ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಸರ್ಕಾರದ ಈ ಆದೇಶದಿಂದಾಗಿ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಮತ್ತೆ ಜೀವ ಬಂದಂತಾಗಿದ್ದು, ಆರ್ಥಿಕ ಇಲಾಖೆಯು ಅನುಮೋದನೆ ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿ ಶೀಘ್ರದಲ್ಲೇ ಚುರುಕುಗೊಳ್ಳಲಿದೆ.