ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 30, 2026 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ವಲಯಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಕಾರ್ಮಿಕರ ಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣೆ, ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ, ವಿಜಯಪುರದಲ್ಲಿ ಕೆಎಸ್ಡಿಎಲ್ ನೂತನ ಘಟಕ ಸ್ಥಾಪನೆ ಸೇರಿದಂತೆ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಸಂಪೂರ್ಣ ವಿವರ ಇಲ್ಲಿದೆ:
ಶೈಕ್ಷಣಿಕ ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳು:
- ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು 115.84 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕಿಟ್ಗಳನ್ನು ವಿತರಿಸಲು ಮುಂದಾಗಿದೆ. ಒಂದನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದ್ದು, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ (MSIL) ಮೂಲಕ ಟೆಂಡರ್ ವಿನಾಯಿತಿ ಅಡಿಯಲ್ಲಿ ಈ ಕಿಟ್ಗಳನ್ನು ಖರೀದಿಸಲಾಗುವುದು.
- ಅಲ್ಪಸಂಖ್ಯಾತರ ಕಾಲೋನಿಗಳಿಗೆ ಕಾಯಕಲ್ಪ: ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ (2026-27 ಹಾಗೂ 2027-28) ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಬರೋಬ್ಬರಿ 600 ಕೋಟಿ ರೂ.ಗಳನ್ನು ಮೀಸಲಿಡಲು ಸಂಪುಟ ಸಮ್ಮತಿಸಿದೆ.
ಆರೋಗ್ಯ ಕ್ಷೇತ್ರಕ್ಕೆ ನೀಡಿದ ಒತ್ತು:
- ಜಿಲ್ಲಾಸ್ಪತ್ರೆಗಳಿಗೆ MRI ಸ್ಕ್ಯಾನರ್: ಬಡ ರೋಗಿಗಳ ಅನುಕೂಲಕ್ಕಾಗಿ ರಾಜ್ಯದ ಆರು ಪ್ರಮುಖ ಜಿಲ್ಲಾಸ್ಪತ್ರೆಗಳಿಗೆ 81 ಕೋಟಿ ರೂ. ವೆಚ್ಚದಲ್ಲಿ ಆರು ನೂತನ ಎಂಆರ್ಐ (MRI) ಯಂತ್ರಗಳನ್ನು ಪೂರೈಸಲು ತೀರ್ಮಾನಿಸಲಾಗಿದೆ.
- ಹಸುಗೂಸುಗಳ ಆರೋಗ್ಯ ತಪಾಸಣೆ: ಹುಟ್ಟಿದ ತಕ್ಷಣವೇ ಶಿಶುಗಳಲ್ಲಿ ಕಾಣಿಸಿಕೊಳ್ಳುವ ವಿಶಿಷ್ಟ ಹಾಗೂ ಜನ್ಮಜಾತ ಕಾಯಿಲೆಗಳನ್ನು ಪತ್ತೆಹಚ್ಚಲು 5.58 ಕೋಟಿ ರೂ. ವೆಚ್ಚದಡಿ ಹೊಸ ತಪಾಸಣಾ ಕಾರ್ಯಕ್ರಮವೊಂದನ್ನು ಜಾರಿಗೆ ತರಲು ಸರ್ಕಾರ ಒಪ್ಪಿಗೆ ನೀಡಿದೆ.
ಸಾರಿಗೆ, ಕೈಗಾರಿಕೆ ಹಾಗೂ ಮೂಲಸೌಕರ್ಯ:
- ಹೈಸ್ಪೀಡ್ ರೈಲು ಕಾರಿಡಾರ್: ಬೆಂಗಳೂರು ಹಾಗೂ ಹೈದರಾಬಾದ್ ನಗರಗಳ ನಡುವಿನ ಸಂಪರ್ಕವನ್ನು ಚುರುಕುಗೊಳಿಸಲು ಉದ್ದೇಶಿಸಲಾಗಿರುವ ‘ಹೈದರಾಬಾದ್ – ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್’ ಯೋಜನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
- ವಿಜಯಪುರದಲ್ಲಿ ಸೋಪ್ ಫ್ಯಾಕ್ಟರಿ: ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಕೈಗಾರಿಕಾ ವಲಯದಲ್ಲಿ 50 ಎಕರೆ ಜಾಗವನ್ನು ಖರೀದಿಸಿ, 227.91 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ದ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಅನುಮೋದನೆ ಸಿಕ್ಕಿದೆ.
- ಹೊಸ ಸಾರಿಗೆ ಬಸ್ಗಳ ಖರೀದಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (NWKRTC) ಬಲವರ್ಧನೆಗೆ 32 ಕೋಟಿ ರೂ. ವೆಚ್ಚದಲ್ಲಿ 80 ಹೊಸ ನಗರ ಸಾರಿಗೆ ಬಸ್ಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.
- ವಿಮಾನಯಾನಕ್ಕೆ ಸಹಾಯಧನ: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಮಾನ ಸೇವೆ ಒದಗಿಸುವ ಉದ್ದೇಶದಿಂದ, ಬೆಂಗಳೂರಿನಿಂದ ಕಲಬುರಗಿ ಹಾಗೂ ಬೀದರ್ಗೆ ಹಾರಾಟ ನಡೆಸುವ ವಿಮಾನಯಾನ ಸಂಸ್ಥೆಗಳಿಗೆ ವಾರ್ಷಿಕ 28.47 ಕೋಟಿ ರೂ. ಪ್ರೋತ್ಸಾಹಧನ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಇತರೆ ಪ್ರಮುಖ ನಿರ್ಧಾರಗಳು:
- ಜೆವರ್ಗಿಯಲ್ಲಿ ಕೌಶಲ್ಯ ಕೇಂದ್ರ: ಕಲಬುರಗಿ ಜಿಲ್ಲೆಯ ಜೆವರ್ಗಿ ತಾಲೂಕಿನಲ್ಲಿ ಹೊಸ ‘ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ’ (GTTC) ನಿರ್ಮಿಸಲು 73.75 ಕೋಟಿ ರೂ. ಮಂಜೂರು ಮಾಡಲಾಗಿದೆ.
- ಬೆಳಗಾವಿ ಡಿಸಿ ಕಚೇರಿ: ಬೆಳಗಾವಿಯ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡದ ಬಾಕಿ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ 20 ಕೋಟಿ ರೂ. ಒದಗಿಸಲಾಗಿದೆ.
- ರಸ್ತೆಗಳ ಡಾಂಬರೀಕರಣ: ಕಲಬುರಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿಗಾಗಿ ಒಟ್ಟು 41.97 ಕೋಟಿ ರೂ. (28.97 ಕೋಟಿ ಮತ್ತು 13 ಕೋಟಿ ರೂ.) ಅನುದಾನ ನೀಡಲಾಗಿದೆ.
- ತಿರುಮಲ ಛತ್ರದ ಜವಾಬ್ದಾರಿ ಬದಲು: ಆಂಧ್ರಪ್ರದೇಶದ ತಿರುಮಲದಲ್ಲಿರುವ ರಾಜ್ಯ ಸರ್ಕಾರದ ಛತ್ರದ ನಿರ್ವಹಣಾ ಜವಾಬ್ದಾರಿಯನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (KSTDC) ಹಸ್ತಾಂತರಿಸಲು ನಿರ್ಣಯಿಸಲಾಗಿದೆ.